ಮುಖ್ಯಮಂತ್ರಿಗಳ ಸರಳತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಗತ-ನಾಡೋಜ ಡಾ. ಮಹೇಶ ಜೋಶಿ
ಬೆಂಗಳೂರು: ಸಾರ್ವಜನಿಕರಿಗೆ ತಮ್ಮಿಂದಾಗುವ ಕಿರಿಕಿರಿ ತಪ್ಪಿಸಲು *ಮುಖ್ಯಮಂತ್ರಿ ಸಿದ್ದರಾಮಯ್ಯ* ಅವರು ತಮ್ಮ ವಾಹನ ಸಂಚಾರಕ್ಕೆ ನೀಡಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ. ಜೊತೆಗೆ ಹಾರ ತುರಾಯಿಗಳ ಬದಲು ಪುಸ್ತಗಳನ್ನು ಸ್ವೀಕರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ನಿರ್ಧಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಗೌರವಿಸುವ ಮೂಲಕ ಅವರ ನಡೆಯನ್ನು ಸ್ವಾಗತಿಸುತ್ತದೆ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ* ತಿಳಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು ಶೀಘ್ರ ಪ್ರಯಾಣಕ್ಕಾಗಿ ಮಹಾನಗರಗಳಲ್ಲಿ ಜೀರೋ ಟ್ರಾಫಿಕ್ ಸೌಲಭ್ಯವನ್ನು ನೀಡುವ ಪರಿಪಾಠವಿದೆ. ಮುಖ್ಯಮಂತ್ರಿಗಳು ಯಾವ ರಸ್ತೆಯಲ್ಲಿ ತೆರಳುತ್ತಾರೆಂಬ ಮಾಹಿತಿ ಪಡೆದ ಸಂಚಾರಿ ಪೊಲೀಸರು ಆ ರಸ್ತೆಯಲ್ಲಿನ ವಾಹನ ಸಂಚಾರವನ್ನು ೧೫-೨೦ ನಿಮಿಷ ಮುಂಚೆಯೇ ನಿಲ್ಲಿಸಿ, ಮುಖ್ಯಮಂತ್ರಿಗಳ ವಾಹನ ಸರಾಗ ಸಂಚಾರಕ್ಕೆ ಅವಕಾಶ ಮಾಡುತ್ತಾರೆ. ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ, ಪಾದಾಚಾರಿಗಳಿಗೆ ಹಾಗೂ ವಾಹನಗಳ ಸಂಚಾರವನ್ನು ತಡೆಯುತ್ತಾರೆ. ಈ ಹಿಂದಿನ ಮುಖ್ಯಮಂತ್ರಿಗಳು ಈ ಸೌಲಭ್ಯವನ್ನು ಪಡೆದಿದ್ದರು. ಆದರೆ, ಮಾನ್ಯ ಸಿದ್ದರಾಮಯ್ಯ ಅವರು ರಸ್ತೆಯಲ್ಲಿನ ಇತರೆ ವಾಹನ ಸವಾರರಿಗೆ/ ಸಾರ್ವಜನಿಕರಿಗೆ ಸಮಸ್ಯೆಯಾಗಬಾರದು ಎಂದು ಕಾರಣಕ್ಕೆ ಮಾದರಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ನಿಲುವನ್ನು ಸಾರ್ವಜನಿಕರು ಸ್ವಾಗತಿಸಿದ್ದು ಇಂತಹ ನಿರ್ಧಾರದಿಂದ ಮುಖ್ಯಮಂತ್ರಿಗಳು ಜನರ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಎಂದು *ನಾಡೋಜ ಡಾ. ಮಹೇಶ ಜೋಶಿ* ಹೇಳಿದ್ದಾರೆ.
*ಮುಖ್ಯಮಂತ್ರಿ ಸಿದ್ದರಾಮಯ್ಯ* ಅವರು ಸಭೆ ಸಮಾರಂಭದಲ್ಲಿ ಹಾರ ತುರಾಯಿಗಳನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ. ಅದರ ಬದಲಿಗೆ ಪುಸ್ತಕ ಸ್ವೀಕರಿಸುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಸ್ವೀಕರಿಸಿದ ತಕ್ಷಣ ತಾವು ಸಹ ಹಾರ ತುರಾಯಿಗಳನ್ನು ಸ್ವೀಕರಿಸುವ ಪದ್ಧತಿಯನ್ನು ನಿಲ್ಲಿಸಿದ್ದೇವೆ. ಬದಲಿಗೆ ಕನ್ನಡ ಪುಸ್ತಕ ಸ್ವಿಕರಿಸುವ ಮೂಲಕ ಪುಸ್ತಕ ಸಂಸ್ಕೃತಿಯನ್ನು ಬೆಳೆಸುತ್ತಿದ್ದೇವೆ. ಇದೇ ಮಾದರಿ ಎಲ್ಲರೂ ಬಳಸಿದ್ದಲ್ಲಿ ಕನ್ನಡ ನಾಡಿನಲ್ಲಿ ಒಂದು ಪರಂಪರೆಯಾಗಿ ಮುಂದುವರೆಯುವುದು. ಸಭೆ ಸಮಾರಂಭದಲ್ಲಿ ಎಲ್ಲರೂ ಹಾರ ತುರಾಯಿಗಳ ಬದಲು ಕನ್ನಡ ಪುಸ್ತಕಗಳನ್ನು ಸ್ವೀಕರಿಸುವ ಪದ್ಧತಿಯನ್ನು ಬೆಳೆಸಿಕೊಳ್ಳಬೇಕು ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ* ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.